Surprising Facts About Srirama in kannada ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು
- DENIL

- Sep 1, 2025
- 3 min read

ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು ಏನು ಗೊತ್ತಾ? srirama
🌺 ಮಹಾವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದವನು ಶ್ರೀರಾಮ. ಮನುಕುಲಕ್ಕೆ ಜೀವನದ ಪಾಠ, ಧರ್ಮ – ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ನಡೆಸುವ ಜೀವನ ಕ್ರಮವನ್ನು ತಿಳಿಸಿಕೊಟ್ಟನು. ಶ್ರೀರಾಮನ ಕುರಿತಾಗಿರುವ ಕೆಲವೊಂದು ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
🌺 ಶ್ರೀರಾಮ ಚಂದ್ರನು ಮಹಾವಿಷ್ಣುವಿನ ಏಳನೇ ಅವತಾರ. ವಿಷ್ಣುವಿನ ಭೂಮಿಯ ಮೇಲಿನ ಅವತಾರವಾಗಿ ಜನಿಸುವ ಶ್ರೀರಾಮನ ಆದರ್ಶಗಳು ಹಾಗೂ ಶ್ರೇಷ್ಠತೆಗೆ ಸಂಬಂಧಿಸಿದ ನಿರೂಪಣೆಯೇ ಈ ಹಿಂದೂ ಮಹಾಕಾವ್ಯ. ಭಾರತ ಮಾತ್ರವಲ್ಲದೇ ದಕ್ಷಿಣ ಏಷಿಯಾ ಹಾಗೂ ಆಗ್ನೇಯ ಏಷಿಯಾದ ಹಲವಾರು ಸಂಸ್ಕೃತಗಳಲ್ಲಿ, ಧಾರ್ಮಿಕ ಗ್ರಂಥಗಳಲ್ಲೂ ರಾಮನ ಕುರಿತಾದ ಉಲ್ಲೇಖವನ್ನು ಕಾಣುತ್ತೇವೆ. ಕೃಷ್ಣನಂತೆಯೇ ರಾಮನು ಕೂಡಾ ವಿಷ್ಣುವಿನ ಅವತಾರಗಳಲ್ಲಿ ಒಬ್ಬನು. ರಾಮನ ಕುರಿತಾಗಿರುವ, ಅಚ್ಚರಿಯ ಪೌರಾಣಿಕ ಸಂಗತಿಗಳನ್ನು ಈ ಕೆಳಗಿದೆ ಓದಿ..!
ಶ್ರೀ ರಾಮನ ಕುರಿತಾದ ಅಚ್ಚರಿಯ ವಿಷಯಗಳು
🌺 ರಾಮಚಂದ್ರನಿಗೆ ಶ್ರೀರಾಮ ಎಂದು ಹೆಸರು ನೀಡಿದ್ದು ರಘು ವಂಶದ ಗುರುಗಳಾದ ವಸಿಷ್ಠರು. ಈ ಹೆಸರಿನಲ್ಲಿ ಎರಡು ಬೀಜಾಕ್ಷರಗಳೂ ಸೇರಿಕೊಂಡಿರುವುದು ವಿಶೇಷ. ಅಗ್ನಿ ಬೀಜ ಮಂತ್ರವಾದ ‘ರಾ’ ಅಮೃತ ಬೀಜ ಮಂತ್ರವಾದ ‘ಮ’ ಈ ಹೆಸರಿನಲ್ಲಿದೆ. ಅಗ್ನಿ ಬೀಜಮಂತ್ರವು ರಾಮನ ಆತ್ಮ ಹಾಗೂ ದೇಹಕ್ಕೆ ಚೈತನ್ಯ ತುಂಬಿದರೆ, ಅಮೃತ ಬೀಜವು ರಾಮನನ್ನು ಆಯಾಸದಿಂದ ಪುನಶ್ಚೇತನಗೊಳಿಸುತ್ತಿತ್ತು.
🌺 ವಿಷ್ಣು ಸಹಸ್ರನಾಮದಲ್ಲಿ 394ನೇ ಹೆಸರು ಶ್ರೀರಾಮನದ್ದಾಗಿದೆ.
🌺 ಪುರಾಣ ಕಥೆಯ ಪ್ರಕಾರ ‘ಒಂದು ದಿನ ಯಮನು ಋಷಿಯ ರೂಪದಲ್ಲಿ ಶ್ರೀರಾಮನನ್ನು ಏಕಾಂತದಲ್ಲಿ ಭೇಟಿಯಾಗಲು ಬರುತ್ತಾನೆ. ಆ ಸಂದರ್ಭದಲ್ಲಿ ಯಾರನ್ನೂ ಒಳಗೆ ಬಿಡಬಾರದು, ಯಾರನ್ನಾದರೂ ಒಳಗೆ ಬಿಟ್ಟರೆ ಮರಣದಂಡನೆಯನ್ನು ವಿಧಿಸುವ ಷರತ್ತನ್ನು ಮುಂದಿಟ್ಟು, ಯಾರನ್ನು ಒಳಗೆ ಬಿಡದಂತೆ ಲಕ್ಷ್ಮಣನನ್ನು ನಿಯೋಜಿಸುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ಮಹಾ ಕೋಪಿಷ್ಠನಾದ ದೂರ್ವಾಸ ಮುನಿಯು ಬರುತ್ತಾನೆ. ಒಳಗೆ ಬಿಡಬೇಕೆಂದು ಒತ್ತಾಯಿಸಿದಾಗ ಲಕ್ಷ್ಮಣನು ಅವನನ್ನು ತಡೆಯುತ್ತಾನೆ.
🌺 ಆದರೆ ಕೋಪಗೊಂಡ ದೂರ್ವಾಸನು ಆಯೋಧ್ಯೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕುತ್ತಾನೆ. ಕೊನೆಗೆ ಲಕ್ಷ್ಮಣನು ಆಯೋಧ್ಯೆಯ ನಾಶಕ್ಕಿಂತ ತಾನು ಮರಣದಂಡನೆಗೆ ಒಳಗಾಗುವುದೇ ಲೇಸು ಎಂದು ನಿರ್ಧರಿಸಿ ದೂರ್ವಾಸನನ್ನು ಒಳಗೆ ಬಿಡುತ್ತಾನೆ. ಇದರಿಂದಾಗಿ ಶ್ರೀರಾಮನ ಪ್ರೀತಿಪಾತ್ರನಾದ ಸಹೋದರ ಲಕ್ಷ್ಮಣನು ಮರಣದಂಡನೆಗೆ ಒಳಗಾಗುವಂತಾಯಿತು. ಅದರೆ ಗುರು ವಸಿಷ್ಠರು ಶ್ರೀ ರಾಮನಿಗೆ ‘ಪ್ರೀತಿ ಪಾತ್ರರನ್ನು ನಿರಾಕರಿಸುವುದು ಮರಣದಂಟನೆಗೆ ಸಮ’ ಎಂದು ತಿಳಿಸಿದರು. ಮುಂದೆ ಅಂತಿಮವಾಗಿ ಶ್ರೀರಾಮನು ವೈಕುಂಠಕ್ಕೆ ತೆರಳುವಾಗ ಲಕ್ಷ್ಮಣನನ್ನು ನಿರಾಕರಿಸಿದನು
🌺 ಬಾಲ್ಯದಲ್ಲಿ ಶ್ರೀರಾಮನು ತುಂಟತನದಿಂದ ತನ್ನ ಆಟಿಕೆಯನ್ನು ಮಂಥರೆಯ ಹಿಂದೆ ಎಸೆಯುತ್ತಾನೆ. ಇದೇ ಮಂಥರೆಯು ಕೈಕೇಯಿಯ ಮೂಲಕ ಶ್ರೀರಾಮನನ್ನು 14 ವರ್ಷ ವನವಾಸಕ್ಕೆ ಕಳಿಸುವ ಮೂಲಕವಾಗಿ ತನ್ನ ಪ್ರತೀಕಾರವನ್ನು ತೀರಿಸಿಕೊಂಡಳು ಎನ್ನಲಾಗುತ್ತದೆ.
🌺 ಭಗವಾನ್ ವಿಷ್ಣುವಿನ ಅವತಾರವಾದ ಪರಶುರಾಮನು ಒಮ್ಮೆ ಶ್ರೀರಾಮನಿಗೆ ಮಹಾವಿಷ್ಣುವಿನ ಬಿಲ್ಲನ್ನು ಎಳೆಯುವಂತೆ ಸವಾಲು ಹಾಕುತ್ತಾನೆ. ರಾಮನು ಈ ಸವಾಲನ್ನು ಸ್ವೀಕರಿಸಿ, ಆ ಸಾಧನೆಯನ್ನು ಸುಲಭವಾಗಿ ಸಾಧಿಸುತ್ತಾನೆ. ಆಗ ಪರಶುರಾಮನಿಗೆ ಶ್ರೀರಾಮನು ಸಾಮಾನ್ಯ ಮನುಷ್ಯನಲ್ಲ ಎಂಬುದರ ಅರಿವಾಯಿತು.
🌺 ಭಗವಾನ್ ರಾಮ ಹಾಗೂ ಸಹೋದರ ಲಕ್ಷ್ಮಣನು ಸೀತೆಯನ್ನು ಕಾಡಿನಲ್ಲಿ ಹುಡುಕುತ್ತಿರುವಾಗ ಕಂಬಂಧ ಎಂಬ ಶಾಪಗ್ರಸ್ಥ ರಾಕ್ಷಸ ಎದುರಾಗುತ್ತಾನೆ. ಈ ರಾಕ್ಷಸನ್ನು ವಧಿಸಿ, ಅವನ ದೇಹವನ್ನು ಶ್ರೀರಾಮನು ಸುಡಲು ಹೋದಾಗ ಕಂಬಂಧನು ಶಾಪದಿಂದ ವಿಮೋಚನೆ ಪಡೆಯುತ್ತಾನೆ. ಮುಂದೆ ಸುಗ್ರೀವನೊಂದಿಗೆ ಸ್ನೇಹವನ್ನು ಬೆಳೆಸಲು ರಾಮನಿಗೆ ಹೇಳುತ್ತಾನೆ.
🌺 ಶ್ರೀರಾಮನು ಸಹೋದರ ಹಾಗೂ ಪತ್ನಿ ಸೀತೆಯೊಂದಿಗೆ ದಂಡಕಾರಣ್ಯದಲ್ಲಿದ್ದಾಗ ಒಮ್ಮೆ ಸೀತೆ ಹಾಗೂ ರಾಮನು ಈಜುವ ಸ್ಪರ್ಧೆಯನ್ನು ಒಡ್ಡುತ್ತಾರೆ. ಶ್ರೀರಾಮನು ಸೀತೆಗಿಂತ ಈಜಿನಲ್ಲಿ ಮುಂದೆ ಇದ್ದರೂ ಸೀತೆಯ ಸಂತೋಷಕ್ಕಾಗಿ ಸೋಲಲು ಬಯಸುತ್ತಾನೆ.
🌺 ಶ್ರೀರಾಮನ ಅಂತ್ಯಕಾಲದಲ್ಲಿ ಹನುಮಂತನ ಕಾವಲಿರುವವರೆಗೂ ಯಮರಾಜನನ್ನು ಹನುಮನು ಅಯೋಧ್ಯೆಯ ಬಳಿ ಬರಲು ಅನುಮತಿಸುವುದಿಲ್ಲ. ಹನುಮಂತನ ಗಮನವನ್ನು ಬೇರೆಡೆಗೆ ಸೆಳೆಯಲು ಶ್ರೀರಾಮನು ತನ್ನ ಉಂಗುರವನ್ನು ನೆಲದ ಬಿರುಕಿನ ಒಳಗೆ ಹಾಕುತ್ತಾನೆ. ನಂತರ ಹನುಮಂತನಿಗೆ ಅದನ್ನು ಹುಡುಕಿ ತರಲು ಕಳುಹಿಸಿ, ಶ್ರೀರಾಮನು ಪಾತಾಳ ಲೋಕಕ್ಕೆ ಹೊರಟು ಹೋಗುತ್ತಾನೆ. ಉಂಗುರ ಹುಡುಕುತ್ತಾ ಆಂಜನೇಯನು ಯಮನನ್ನು ಭೇಟಿ ಮಾಡುತ್ತಾನೆ. ಆಗ ಅಂಜನೇಯನು ರಾಮನ ಉಂಗುರ ಬಿದ್ದು ಹೋಗಿದೆ ಎಂದಾಗ ಯಮನು ರಾಮನ ಅವತಾರ ಮುಗಿಯುವ ಸಮಯ ಬಂದಿದೆ ಎಂದು ಹೇಳುತ್ತಾನೆ.
🌺 ರಾಮನ ಉಂಗುರವನ್ನು ಹುಡುಕುತ್ತಾ ಆಂಜನೇಯನು ಸರ್ಪಲೋಕಕ್ಕೆ ಬಂದಾಗ ಅಲ್ಲಿನ ರಾಜನಲ್ಲಿ ಉಂಗುರವನ್ನು ಕೇಳುತ್ತಾನೆ. ಆಗ ರಾಜನು ಉಂಗುರಗಳು ತುಂಬಿದ್ದ ಪೆಟ್ಟಿಗೆಯನ್ನು ತೋರಿಸುತ್ತಾನೆ. ಅವೆಲ್ಲವೂ ಕೂಡಾ ಶ್ರೀರಾಮನವೇ ಆಗಿದ್ದುವು. ಯಾವಾಗ ರಾಮನ ಅವತಾರವು ಮುಗಿಯುತ್ತದೋ ಆಗ ಶ್ರೀರಾಮನು ಉಂಗುರವನ್ನು ಬಿರುಕಿನಿಂದ ಕೆಳಗೆ ಹಾಕುತ್ತಾನೆ. ಅಂದರೆ ಶ್ರೀರಾಮನ ಒಂದು ಅವತಾರವು ಸಂಪೂರ್ಣವಾಗುತ್ತದೆ ಎಂದು ರಾಜನು ಹನುಮಂತನಿಗೆ ತಿಳಿಸುತ್ತಾನೆ. ಇದರರ್ಥವೆಂದರೆ ಶ್ರೀರಾಮನು ಹಲವು ಅವತಾರಗಳನ್ನು ಎತ್ತಿ ಬಂದವನೆಂದು ನಾವು ತಿಳಿಯಬಹುದು.
ಶ್ರೀರಾಮ ನವಮಿ ಆಚರಣೆ
SRIRAMA
🌷ರಾಮನವಮಿಯ ಆಚರಣೆ 9 ದಿನಗಳ ಮುನ್ನವೇ ಆರಂಭವಾಗುತ್ತದೆ. ಏ.2ರಂದು ರಾಮನವಮಿ ಆರಂಭವಾಗಿದ್ದು, ಏಪ್ರಿಲ್ 10ರಂದು ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ.
🌻ಶ್ರೀ ರಾಮ ಎಂದರೆ ಆದರ್ಶ ಪುರುಷ. ವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದ ರಾಮನ ಹೆಸರಲ್ಲೇ ಅಗ್ನಿ ಬೀಜಾಕ್ಷರ ಮಂತ್ರವಿದೆ. ಪ್ರತಿ ಹೆಣ್ಣೂ ಬಯಸುವುದೇ ಶ್ರೀರಾಮನಂಥ ಪತಿ ಸಿಗಲಿ ಎಂದು. ಆತ ಏಕಪತ್ನೀ ವ್ರತಸ್ಥ. ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಜನಿಸಿದನು. ಹಾಗಾಗಿ ಪ್ರತಿ ವರ್ಷ ಆ ದಿನದಂದು ಶ್ರೀ ರಾಮನವಮಿ ಎಂದು ರಾಮನ ಜನ್ಮ ದಿನ ಆಚರಿಸಲಾಗುತ್ತದೆ. ಅಲ್ಲದೆ ಈ ದಿನವನ್ನು ಕೆಟ್ಟದ್ದರ ವಿರುದ್ಧ ಒಳಿತಿನ ಜಯವಾಗಿಯೂ ನೋಡಲಾಗುತ್ತದೆ. ಭಾರತದಾದ್ಯಂತ ಬಹಳಷ್ಟು ದೇವಾಲಯಗಳಲ್ಲಿ ರಾಮನವಮಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ರಾಮನವಮಿ ಆಚರಣೆ ಆರಂಭವಾಗುತ್ತದೆ. ರಾಮನವಮಿಯು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಅತ್ಯಂತ ಭಕ್ತಿಯಿಂದ ಜನರು ಇದನ್ನು ಆಚರಿಸುತ್ತಾರೆ. ರಾಮನವಮಿ ಈ ಬಾರಿ ಯಾವತ್ತು? ಹೇಗೆ ಆಚರಿಸಲಾಗುತ್ತದೆ ಎಲ್ಲವನ್ನೂ ನೋಡೋಣ.
🌷ರಾಮನವಮಿ ಆಚರಣೆ ಹೇಗೆ?
🌻ರಾಮನವಮಿ 9 ದಿನಗಳ ಮುನ್ನವೇ ಅಂದರೆ ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ದೇವಾಲಯಗಳಲ್ಲಿ, ಮನೆಗಳಲ್ಲಿ ರಾಮಾಯಣದ ಕತೆಯನ್ನು ಹೇಳಲಾಗುತ್ತದೆ. ಈ ಸಂಬಂಧ ನಾಟಕ ನಿರೂಪಣೆಗಳು ನಡೆಯುತ್ತವೆ. ಇದರ ಪಠಣ, ಶ್ರವಣವೆರಡೂ ಅಪಾರ ಲಾಭಗಳನ್ನು ತಂದುಕೊಡಲಿದೆ. ಜನರು ಪ್ರತಿ ಸಂಜೆ ರಾಮರಕ್ಷಾ ಸ್ತ್ರೋತ್ರ ಪಠಣ ಮಾಡುತ್ತಾರೆ. ರಾಮನ ಕುರಿತ ಭಜನೆಗಳು ಎಲ್ಲೆಡೆ ಭಯಭಕ್ತಿಗಳಿಂದ ನಡೆಯುತ್ತವೆ. ರಾಮನ ವಿಗ್ರಹವನ್ನು ತೊಟ್ಟಿಲಿಗೆ ಹಾಕಿ ತೂಗಿ ಪೂಜಿಸಲಾಗುತ್ತದೆ. ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ರಾಮನ ವಿಗ್ರಹವಿಟ್ಟು ವಿಶೇಷವಾಗಿ ಪೂಜಿಸಲಾಗುತ್ತದೆ. ರಾಮನವಮಿಗೂ 8 ದಿನಗಳ ಮೊದಲಿಂದಲೇ ಭಕ್ತರು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳು ವರ್ಜಿಸಿದ ಆಹಾರವನ್ನು ಮಾತ್ರ ಸೇವಿಸುತ್ತಾರೆ.
🌷ಪೂಜಾ ವಿಧಿ
🌻ರಾಮನವಮಿಯ ದಿನ ಬೇಗ ಎದ್ದು ಸ್ನಾನ ಮಾಡಿ, ಪೂಜೆಗೆ ಕೂರಬೇಕು. ತುಳಸಿ ಹಾಗೂ ಕಮಲದ ಹೂವು ರಾಮನ ಪೂಜೆಗೆ ಮುಖ್ಯವಾಗಿವೆ. ಶೋಡಶೋಪಚಾರದಿಂದ ಆರಂಭವಾಗಿ 16 ಹಂತಗಳಲ್ಲಿ ರಾಮ ಪೂಜೆ ನಡೆಸಬೇಕು. ಬಳಿಕ ಖೀರು, ಹಣ್ಣುಗಳ ನೈವೇದ್ಯ ಮಾಡಿ ಎಲ್ಲರಿಗೂ ಪಾನಕ, ಮಜ್ಜಿಗೆ ಹಂಚಬೇಕು. ಪೂಜೆಯ ಬಳಿಕ, ಮನೆಯ ಅತಿ ಕಿರಿಯ ಮಹಿಳೆ ಎಲ್ಲ ಸದಸ್ಯರ ಹಣೆಗೆ ತಿಲಕವಿರಿಸಬೇಕು.
🌷ರಾಮನವಮಿ ವ್ರತ ಕತಾ
🌻ಲಂಕೆಯ ರಾಜ ರಾವಣನ ಆಡಳಿತದಲ್ಲಿ ಪ್ರಜೆಗಳೆಲ್ಲ ಬಸವಳಿದು ಹೋಗಿದ್ದರು. ಆತನ ಆಡಳಿತ ಕೊನೆಯಾಗಲಿ ಎಂದು ಬಯಸುತ್ತಿದ್ದರು. ಆದರೆ, ರಾವಣನು ಬ್ರಹ್ಮನಿಂದ ತನ್ನನ್ನು ಯಾವ ದೇವರು ಅಥವಾ ಯಕ್ಷರು ಕೊಲ್ಲಲಾಗದಂತೆ ವರ ಪಡೆದಿದ್ದ. ಸಿಕ್ಕಾಪಟ್ಟೆ ಶಕ್ತಿಶಾಲಿಯಾಗಿದ್ದ. ಹಾಗಾಗಿ, ಈತನನ್ನು ಮುಗಿಸಲು ಏನಾದರೂ ಸಹಾಯ ಮಾಡುವಂತೆ ಕೋರಿ ದೇವಾನುದೇವತೆಗಳು ವಿಷ್ಣುವಿನಲ್ಲಿ ಬೇಡಿಕೊಂಡರು. ಆಗ ವಿಷ್ಣುವು ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪ್ರಥಮ ಪುತ್ರನಾಗಿ ರಾಮನ ಅವತಾರವೆತ್ತಿದ. ಹೀಗೆ ರಾಮನಾಗಿ ವಿಷ್ಣು ಜನಿಸಿದ ದಿನವನ್ನು ಅಂದಿನಿಂದಲೂ ರಾಮನವಮಿಯಾಗಿ ಆಚರಿಸಲಾಗುತ್ತಿದೆ. ತುಳಸೀದಾಸರು ರಾಮಚರಿತ ಮಾನಸ ಬರೆಯಲು ಆರಂಭಿಸಿದ್ದು ಕೂಡಾ ಇದೇ ದಿನವಾಗಿದೆ ಎಂಬುದು ವಿಶೇಷ.



Comments